ಚುನಾವಣೆಯೆಂದರೆ ದಸರಾ ಬಂದಂತೆ ; ಹುಲಿ, ಇಲಿ ವೇಷಗಳು ಹೊರಡುತ್ತವೆ, ಎಸ್ಡಿಪಿಐ, ಬಿಜೆಪಿ ಪರಸ್ಪರ ಆಕ್ಸಿಜನ್ ಹಂಚಿ ಬದುಕುತ್ತವೆ !

19-03-23 09:26 pm       HK News Desk   ಕರಾವಳಿ

ಚುನಾವಣೆ ಅಂದರೆ ದಸರಾ ಬಂದಂತೆ. ಇನ್ನು ಹುಲಿ, ಇಲಿಯಂತಹ ನಾನಾ ರೀತಿಯ ವೇಷಗಳು ಹೊರಡುತ್ತವೆ. ಚುನಾವಣಾ ವೇಳೆಯಲ್ಲಿ ಎಸ್ಡಿಪಿಐ ಬಿಜೆಪಿಗೆ ಆಕ್ಸಿಜನ್ ಕೊಟ್ಟರೆ ಬಿಜೆಪಿ ಎಸ್ಡಿಪಿಐಗೆ ಆಕ್ಸಿಜನ್ ನೀಡಿ ಬದುಕುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ ಖಾದರ್ ಕುಹಕವಾಡಿದ್ದಾರೆ.

ಉಳ್ಳಾಲ, ಮಾ.19: ಚುನಾವಣೆ ಅಂದರೆ ದಸರಾ ಬಂದಂತೆ. ಇನ್ನು ಹುಲಿ, ಇಲಿಯಂತಹ ನಾನಾ ರೀತಿಯ ವೇಷಗಳು ಹೊರಡುತ್ತವೆ. ಚುನಾವಣಾ ವೇಳೆಯಲ್ಲಿ ಎಸ್ಡಿಪಿಐ ಬಿಜೆಪಿಗೆ ಆಕ್ಸಿಜನ್ ಕೊಟ್ಟರೆ ಬಿಜೆಪಿ ಎಸ್ಡಿಪಿಐಗೆ ಆಕ್ಸಿಜನ್ ನೀಡಿ ಬದುಕುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ ಖಾದರ್ ಕುಹಕವಾಡಿದ್ದಾರೆ.

ಮಂಗಳೂರು ‌ವಿಧಾನಸಭಾ ಕ್ಷೇತ್ರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಲ್ಲಾಪುವಿನ ಖಾಸಗಿ ಸಭಾಂಗಣದಲ್ಲಿ ಭಾನುವಾರ ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಅಧಿಕಾರದಲ್ಲಿ ಮುಂದಿನ ಬಾಗಿಲನ್ನ‌ ಮುಚ್ಚಿ ಹಿಂದಿನ ಬಾಗಿಲಲ್ಲಿ ತಮ್ಮ‌ ಇಷ್ಟ ಮಿತ್ರರಿಗೆ ಅಧಿಕಾರ ನೀಡಿ ಎಲ್ಲವನ್ನೂ ಖಾಸಗೀಕರಣ ಮಾಡಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಇಲ್ಲ, ಯುವಕರಿಗೆ ಉದ್ಯೋಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯವರ ಭಿನ್ನ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳದೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಕೈ ಕಾರ್ಯಕರ್ತರಿಗೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ ಮೊದಲು ಚುನಾವಣೆ ಸಂದರ್ಭ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೆವು. ಈ ಸಲ ಪ್ರಣಾಳಿಕೆ ಇನ್ನಷ್ಟೆ ಬಿಡುಗಡೆ ಆಗಬೇಕಷ್ಟೆ. ಅದರ ಪ್ರಮುಖ ಅಂಶಗಳನ್ನ ಜನರಿಗೆ ಮೊದಲೇ ಮನವರಿಕೆ ಮಾಡುವ ಕಾರ್ಯಕ್ರಮವನ್ನ ಹಾಕಿದ್ದೇವೆ. ಪ್ರಜಾಧ್ವನಿಯಲ್ಲಿ ಇಡೀ ರಾಜ್ಯಕ್ಕೆ ಬೇಕಾದ ಭರವಸೆ, ಕೊಡುಗೆಗಳಿವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡಲ್ಲಿ ನಂ.1 ಕೊಡುಗೆಯಾಗಿ ಗೃಹಜ್ಯೋತಿಯನ್ನ ನೀಡಿದೆ. ಗ್ಯಾಸ್ ,ಅಗತ್ಯ ವಸ್ತುಗಳ ಬೆಲೆ ಏರಿಕೆ ,ತೆರಿಗೆ ಸಮಸ್ಯೆಯಿಂದ ಜನಸಾಮಾನ್ಯರು ನಲುಗುತ್ತಿದ್ದಾರೆ. ಉಪ್ಪಿಗೂ ಬಿಜೆಪಿ ಸರಕಾರ ಜಿಎಸ್ ಟಿ ಮೂಲಕ ತೆರಿಗೆ ಹಾಕುತ್ತಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗ ಸರಕಾರ ಅನುದಾನ ನೀಡುತ್ತಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕರಾವಳಿ ಪ್ರಾಧಿಕಾರಕ್ಕೆ ವಾರ್ಷಿಕ 2,500 ಕೋಟಿ ಅನುದಾನ ಕೊಟ್ಟು ಮೂಲ ಸೌಕರ್ಯಗಳನ್ನ ಮೇಲ್ದರ್ಜೆಗೇರಿಸುವ ಭರವಸೆ ಕರಾವಳಿ ಪ್ರಜಾಧ್ವನಿಯಲ್ಲಿ ಅಡಕವಾಗಿದೆ‌ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ ಡಿಪಿಐ ಪ್ರಮುಖರಾದ ಅಶ್ರಫ್ ಕೆ.ಸಿರೋಡ್ , ಝಿಯಾದ್ ಕೆ.ಸಿ.ನಗರ,  ಜೆಡಿಎಸ್ ನಿಂದ ಹೈದರ್ , ಡಿವೈಎಫ್ಐ ಕೆಸಿರೋಡ್ ಘಟಕದ ಅಧ್ಯಕ್ಷ ಇರ್ಫಾನ್ ಶಾಂತಿನಗರ ಸಹಿತ  ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

SDPI and BJP both share oxgeyen together slams MLA UT Khader in Ullal Block Congress meeting Mangalore.